ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ॑ ॑ಕೆ.ಶಿವರಾಮ ಕಾರಂತರ ಬಹು ಚರ್ಚಿತ ‘ಬೆಟ್ಟದ ಜೀವ ಕನ್ನಡ ಕಾದಂಬರಿ ಆಧರಿತ ಈ ಚಲನಚಿತ್ರ ಮನುಷ್ಯ ಸಂಬಂಧಗಳು ಮತ್ತು ಮನುಷ್ಯ-ಪ್ರಕೃತಿಯ ಒಡನಾಟವನ್ನು ಕುರಿತದ್ದು.
ಬ್ರಿಟಿಷರ ಆಳ್ವಿಕೆಯ ವಿರುದ್ಧ ಭಾರತದ ಸ್ವಾತಂತ್ರ್ಯ ಸಂಗ್ರಾಮದ ತೀವ್ರತೆ ಹೆಚ್ಚಿದ್ದ ದಿನಗಳು. ಸಾಮಾನ್ಯ ಜನರಲ್ಲಿ ಈ ವಿಷಯದ ಬಗ್ಗೆ ಜಾಗೃಇ ಮೂಡಿಸುತ್ತಾ ಊರಿಂದ ಊರಿಗೆ ತಿರುಗಾಡುತ್ತಿದ್ದ ತರುಣ ಶಿವರಾಮು ಒಮ್ಮೆ ದಟ್ಟವಾದ ಕಾಡಿನಲ್ಲಿ ದಾರಿ ತಪ್ಪಿದಾಗ ಆ ರಾತ್ರಿ ಕಳೆಯಲು ಗುಡ್ಡಗಾಡಿನವರ ಸಯಾಯದಿಂದ ಕೆಳಬೈಲಿನ ಗೋಪಾಲಯ್ಯನವರ ಮನೆ ಸೇರುತ್ತಾನೆ. ಪ್ರೀತಿ ಪೂರ್ವಕ ಒತ್ತಯಕ್ಕೆ ಮಣಿದು ಕೆಲವು ದಿನ ಅಲ್ಲಿಯೇ ಉಳಿಯುತ್ತಾನೆ. ಆ ದಿನಗಳಲ್ಲಿ ಶಿವರಾಮುವಿನ ಅರಿವಿಗೆ ಬರುವ ಬದುಕಿನ ವಿವಿಧ ಮುಖಗಳು ಅವನ ಮುಂದೆ ಒಂದು ಹೊಸ ಲೋಕವನ್ನೇ ತೆರೆದಿಡುತ್ತವೆ.
ಗುಡ್ಡಗಾಡು ಜನರ ಮುಗ್ಧ ಮನಸ್ಸು-ಆತಿಥ್ಯ-ಪ್ರಕೃತಿಯೊಡನೆ ಸಾಮರಸ್ಯದ ಒಡನಾಟ- ರೂಢಿಯಿಂದ ಬೆಳೆದು ಬಂದ ಅವರ ವಿವೇಕ- ಆಚರಣೆ ಅನುಷ್ಠಾನಗಳು- ದೇಶಿ ಸಂಸ್ಕೃತಿ; ಗೋಪಾಲಯ್ಯ ಮತ್ತು ಅವರ ಹೆಂಡತಿ ಶಂಕರಿಯರ ಸರಳ ಜೀವನ; ತಮ್ಮ ಸುತ್ತ ಮುತ್ತಲಿನ ಜನರ ಬಗೆಗಿನ ಅವರ ಕಾಳಜಿ; ಪ್ರಕೃತಿ ಒಡ್ಡಿದ ಸವಾಲುಗಳನ್ನು ಎದುರಿಸುತ್ತಾ ಆ ಕಾದಿನ ಮಧ್ಯೆಯೇ ಕಾಟುಮೂಲೆಯ ಸುಂದರ ತೋಟವನ್ನು ಬೆಳೆಸಿರುವ ಗೋಪಾಲಯ್ಯನವರ ಸಾಹಸ ಪ್ರವೃತ್ತಿಯ ಯಶೋಗಾಥೆ; ಇಳಿ ವಯಸ್ಸಿನಲ್ಲೂ ಉಳಿಸಿಕೊಂಡಿರುವ ಅವರ ಜೀವನೋತ್ಸಾಹ; ಬಹು ವರ್ಷಗಳಿಂದ ತಮ್ಮಿಂದ ದೂರವಾಗಿಯೇ ಉಳಿದಿರುವ ಒಬ್ಬನೇ ಮಗ ಶಂಭುವನ್ನು ನೋಡಲು ಪರಿತಪಿಸುತ್ತಿರುವ ಶಂಕರಿ; ಅದೇ ಕಾರಣಕ್ಕೆ ಗೋಪಾಲಯ್ಯ ಅನುಭವಿಸುತ್ತಿರುವ ಮಾನಸಿಕ ನೋವು; ಶಂಭುವಿನ ವಿಷಯದಲ್ಲಿ ವಿವಿಧ ಪಾತ್ರಗಳು ಶಿವರಾಮುವಿನ ಮುಂದೆ ಮುಕ್ತವಾಗಿ ತೆರೆದುಕೊಳ್ಳುವಾಗ ಮನಸ್ಸಿನಲ್ಲೇ ಹುಗಿದಿಟ್ಟಿದ್ದ ಅವರವರ ಊಹೆಗಳು- ಆತಂಕಗಳು- ಅಪರಾಧಿ ಪ್ರಜ್ಞೆಗಳು ಎಲ್ಲರನ್ನೂ ಆತ್ಮಾವಲೋಕನಕ್ಕೆ ಹಚ್ಚುವ ಪ್ರಕ್ರಿಯೆ- ಇವೆಲ್ಲ ಶಿವರಾಮುವಿನ ಅರಿವನ್ನೂ ಹಿಗ್ಗಿಸಿ ಅವನು ಬದುಕಿನ ನಿಜವಾದ ಅರ್ಥವನ್ನು ಗ್ರಹಿಸುವುದಕ್ಕೆ ಸಹಾಯ ಮಾಡುತ್ತವೆ.
ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಈ ಸೂಕ್ಷ್ಮ ವಿಷಯಗಳ ಒಳನೋಟವನ್ನು ಹಿಡಿದಿಡುವ ಪ್ರಯತ್ನ ‘ಬೆಟ್ಟದ ಜೀವ ಚಲನಚಿತ್ರ. ೫೮ ನೇ ರಾಷ್ಟ್ರ ಪ್ರಶಸ್ತಿ ಪಟ್ಟಿಯಲ್ಲಿ ಈ ಚಿತ್ರಕ್ಕೆ ಅತ್ಯುತ್ತಮ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಚಿತ್ರ ಎಂಬ ಮನ್ನಣೆ ದೊರೆತಿದೆ.
ಕಾರಂತರ ಈ ಕಾದಂಬರಿಯನ್ನು ಚಿತ್ರಕಥೆಯಾಗಿಸಿ, ನಿರ್ದೇಶಿಸಿದ ಖ್ಯಾತಿ ಪಿ.ಶೇಷಾದ್ರಿ ಅವರದ್ದು. ಇದನ್ನು ಬಸಂತ್ ಕುಮಾರ್ ಪಾಟೀಲ್ ನಿರ್ಮಿಸಿದ್ದು, ಅನಂತ್ ಅರಸ್ ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಗೋಪಾಲಕೃಷ್ಣ ಪೈ ಸಂಭಾಷಣೆ ಕೆಂಪರಾಜ್ ಸಂಕಲನವಿದೆ. ಹೆಚ್.ಜಿ.ದತ್ತಾತ್ರೇಯ, ಸುಚೇಂದ್ರಪ್ರಸಾದ್, ರಾಮೇಶ್ವರಿ ವರ್ಮ, ಲಕ್ಷ್ಮಿಹೆಗ್ಡೆ ಮುಂತಾದವರ ಅಭಿನಯಿಸಿದ್ದಾರೆ.